Ticker

6/recent/ticker-posts

ಜಿ. ಪಿ. ರಾಜರತ್ನಂ : G. P. Rajarathnam

ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಹ ಚಾಮರಾಜ ನಗರ ಜಿಲ್ಲೆಯ ಗುಂಡ್ಲು ಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ ನಾಗ ಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. 
ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಗಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲ ಕೃಷ್ಣ ಅಯ್ಯಂಗಾರ್ , ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. 
ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ. ಎ (ಕನ್ನಡ) ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶು ಗೀತೆ ಸಂಕಲನ'. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'. ಮಡದಿಯ ಸಾವಿನಿಂದ ಧೃತಿಗೆಟ್ಟರು

ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಉತ್ತಮವಾಗಲೇ ಇಲ್ಲ. ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು

ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು.
ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.

ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು.

೧೯೭೮ರಲ್ಲಿ 'ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ',

೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.

ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ.
""ಭ್ರಮರ"" ಎಂಬುದು ಇವರ ಕಾವ್ಯನಾಮವಾಗಿತ್ತು. "ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. 'ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. 
ಟಿ. ಪಿ.ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು. ಹಲವು ಪ್ರಕಾರಗಳಲ್ಲಿ ಸುಮಾರು ೨೯೫ ಗ್ರಂಥಗಳನ್ನು ರಚಿಸಿರುವ ರಾಜರತ್ನಂರವರ ಸಾದನೆ ಅದ್ವಿತೀಯವಾದುದು. ಕೊನೆ ತನಕ ಚಪ್ಪಲಿ ಹಾಕದೆ ನಡೆದ, ಹಲ್ಲು ಕಟ್ಟಿಸಿಕೊಳ್ಳಲು ಒಪ್ಪದ, ಬಿಳಿ ಪಂಚೆ ಬನಿಯನ್ ಗಳಲ್ಲಿಯೇ ಕಾಲ ಕಳೆದ ರಾಜರತ್ನಂ ಅತ್ಯಂತ ಸರಳ ಜೀವಿ.

ರಾಜರತ್ನಂ ಅವರ ಪ್ರಮುಖ ಕೃತಿಗಳು

ತುತ್ತೂರಿ
ರತ್ನನ ಪದಗಳು
ಎಂಡಕುಡುಕ ರತ್ನ
ನಾಗನ ಪದಗಳು
ಬುದ್ಧನ ಜಾತಕಗಳು
ಧರ್ಮದಾನಿ ಬುದ್ಧ
ಭಗವಾನ್ ಮಹಾವೀರ
ಮಹಾವೀರನ ಮಾತುಕತೆ
ಕಡಲೆಪುರಿ
ಗುಲಗಂಜಿ
ಕಂದನ ಕಾವ್ಯ ಮಾಲೆ

'ಗೌತಮಬುದ್ಧ' ಎಂಬ ಕೃತಿ, ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು

ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣ ಮೂಲಕ, ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು.                                                            
                                                                                                                          ಕೃಪೆ : ನೆನಪಿನಂಗಳ

Post a Comment

0 Comments