Ticker

6/recent/ticker-posts

ಬೇಬಿ ಹಾಲ್ದೇರ್ [Baby Halder]

ವಿಶ್ವವಾಣಿ ಪತ್ರಿಕೆಯಲ್ಲಿ ಓದಿದ ಈ ಕೆಳಗಿನ ಲೇಖನ ನನಗೆ ಬೇಬಿ ಹಾಲ್ದೇರ್ [Baby Halder] ಅವರನ್ನು ಪರಿಚಯಿಸಿತು. ಜಗದೀಶ್ ಮಾನೆ ಅವರಿಗೆ ಧನ್ಯವಾದಗಳು . 

 ನೀವು ಓದಿ .. 

ಶ್ರೀ ಮಂತರ ಮನೆಗಳಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬಳು, ಹೈಸ್ಕೂಲಿನ ಮೆಟ್ಟಿಲನ್ನೇ ಹತ್ತದವಳು ಈಗ ಅಂತಾರಾಷ್ಟ್ರೀಯ ಖ್ಯಾತ ಲೇಖಕಿಯಾಗಿದ್ದಾಳೆಂದರೆ ಯಾರಿಗೆ ತಾನೆ ಆಶ್ಚರ್ಯ ಆಗುವುದಿಲ್ಲ. ಇಂಥದ್ದೊಂದು ಮಹಾನ್ ಆಶ್ಚರ್ಯಕ್ಕೆ ಕಾರಣವಾದಾಕೆ ಬೇಬಿ ಹಾಲ್ದೇರ್

ಬೇಬಿ ಹಾಲ್ದೇರ್ 1973ರಲ್ಲಿ ಕಾಶ್ಮೀರದಲ್ಲಿ ಜನಿಸಿದಳು. ಆಕೆಯದ್ದು ಕಡು ಬಡತನದ ಕುಟುಂಬ. ತಂದೆ ಕೂಲಿ ಕೆಲಸ ಮಾಡುತ್ತಿದ್ದ ಜತೆಗೆ ಕುಡುಕನಾಗಿದ್ದ. ಕೆಲಸ ಹುಡುಕಿಕೊಂಡು ಆಕೆಯ ಕುಟುಂಬ ಕಾಶ್ಮೀರದಿಂದ ಪಶ್ಚಿಮ ಬಂಗಾಳಕ್ಕೆ ಬಂದಿತು. ಜಾಗ ಬದಲಾದರೂ ಆತ ಮಾತ್ರ ಬದಲಾಗಲಿಲ್ಲ.
 
ನಿರಂತರ ಚಿತ್ರಹಿಂಸೆಯಿಂದ ಹೆಂಡತಿಯನ್ನು ಕಳೆದುಕೊಂಡ. ಒಂದೇ ವಾರದಲ್ಲಿ ಮತ್ತೊಂದು ಮದುವೆಯಾದ. ಮಲತಾಯಿಯ ಕಿರುಕುಳ ನಿರಂತರವಾಗಿ ನಡೆಯುತ್ತಿತ್ತು. ತಂದೆ ಚಿಕ್ಕವಯಸ್ಸಿನಲ್ಲಿಯೇ ಹಾಲ್ದೇರಳ ಮದುವೆ ಮಾಡಿದ. ಹಾಲ್ದೇರ 16 ವರ್ಷದವಳಿದ್ದಾಗಲೆ ಮೂರು ಮಕ್ಕಳ ತಾಯಿಯಾದಳು! ತಂದೆ ನೋಡಿದರೆ ಹಾಗೆ, ಇನ್ನು ಗಂಡನೂ ಸಂಶಯ ಪಿಶಾಚಿಯೇ. ಆಕೆಗೆ ನಿತ್ಯ ಚಿತ್ರಹಿಂಸೆ ಕೊಡುತ್ತಿದ್ದ. ತವರುಮನೆಗೆ ವಾಪಸ್ ಹೋಗಲಾಗದು. ಹೀಗಾಗಿ ಹಾಲ್ದೇರ್ ಗಟ್ಟಿಮನಸ್ಸು ಮಾಡಿ ತನ್ನ ಮೂರು ಮಕ್ಕಳೊಂದಿಗೆ ದೆಹಲಿಯ ರೈಲು ಹತ್ತಿಬಿಟ್ಟಳು. ಆರಂಭದ ಹಲವಾರು ದಿನಗಳನ್ನು ದೆಹಲಿಯ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಾ ಕಳೆದಳು

ಆದರೆ ಒಂಟಿ ಹೆಣ್ಣುಮಗಳು ರೈಲು ನಿಲ್ದಾಣದಲ್ಲಿ ರಾತ್ರಿ ಕಳೆಯಲಾಗುತ್ತದೆಯೇ? ಅದರ ಕಷ್ಟ ಅವಳಿಗೆ ಅರಿವಾಯಿತು. ಕೆಲಸ ಹುಡುಕಿಕೊಂಡು ಆಕೆ ದೆಹಲಿಯ ಗುರಗಾಂವ್ಗೆ ಹೋದಳು. 
 
ಆ ಸಮಯದಲ್ಲಿ ಗುರಗಾಂವ್ನಲ್ಲಿದ್ದ ನಿವೃತ್ತ ಪ್ರೊಫಸರ್ ಪ್ರಭೋದ್ಕುಮಾರ್ ಅವರ ಮನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಪ್ರೊಫಸರ್ ಯಾರು ಗೊತ್ತಾ? ಭಾರತದ ಶ್ರೇಷ್ಠ ಕತೆಗಾರ ಮುನ್ಶಿ ಪ್ರೇಮ್ಚಂದರ್ರ ಮೊಮ್ಮಗ. ಅವರ ಮನೆಯಲ್ಲಿ ಆಕೆಗೆ ಮನೆ ಮಗಳಿಗಿರುವಷ್ಟೇ ಸ್ವಾತಂತ್ರ್ಯ ಸಿಕ್ಕಿತು. ಹಾಲ್ದೇರ್, ಪ್ರೊಫಸರ್ರ ಮನೆಯಲ್ಲಿ ಎಲ್ಲ ಕೆಲಸ ಮುಗಿಸಿ ಪುಸ್ತಕಗಳ ಧೂಳು ಹೊಡೆಯುವಾಗ ಆ ಕೆಲಸ ಮರೆತು ಯಾವುದೋ ಪುಸ್ತಕ ಓದುತ್ತಾ ನಿಂತುಬಿಡುತ್ತಿದ್ದಳು. ಇದನ್ನು ಒಂದು ತಿಂಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರಭೋದ್ ಕುಮಾರರು ಆಕೆಯನ್ನು ಕರೆದು, ತಸ್ಲೀಮಾ ನಸ್ರೀನ್ರ "ಅಮರ್ ಮೇಯೆಬೆಲ " [My Girlhood ] ನ ಬಂಗಾಳಿ ಅನುವಾದದ ಪುಸ್ತಕವನ್ನು ಅವಳಿಗೆ ಕೊಟ್ಟು ‘ಇದನ್ನು ಪೂರ್ತಿಯಾಗಿ ಓದಿ ಆಮೇಲೆ ನಿನ್ನ ಬದುಕಿನ ಕಥೆ ಬರೆದುಕೊಡು’ ಎಂದರು. ಪ್ರೊಫಸರ್ ಕೊಟ್ಟ ಪುಸ್ತಕವನ್ನುಆಕೆ ಓದಿ ಮುಗಿಸಿದಳು.
 
ಆದರೆ ಅವಳಿಗೆ ತನ್ನ ಬದುಕಿನ ಕಥೆ ಬರೆಯುವುದು ಹೇಗೆಂದು ತಿಳಿಯಲಿಲ್ಲ. ಅವಳು ಶಾಲೆಬಿಟ್ಟು ಸುಮಾರು 20 ವರ್ಷಗಳೇ ಕಳೆದಿದ್ದವು. ಕಡೆಗೊಮ್ಮೆ ಗಟ್ಟಿ ಮನಸ್ಸು ಮಾಡಿ ಬರೆಯಲು ಕುಳಿತಳು. ಬರೆಯುವುದನ್ನೇ ಮರೆತ ಕೈಗಳು ಮೊದ ಮೊದಲು ನಡುಗುತ್ತಿದ್ದವು. ಅಕ್ಷರಗಳೂ ನೆನಪಿಗೆ ಬರಲಿಲ್ಲ. ಆಗ ಪ್ರೊಫಸರ್ ಆಕೆಯನ್ನು ಕರೆದು ಎರಡು ನೋಟ್ಬುಕ್ ಹಾಗೂ ಪೆನ್ ಕೊಟ್ಟು ‘ನಾನು ಒಂದು ತಿಂಗಳು ಟೂರ್ ಹೊರಟಿದ್ದೇನೆ. ವಾಪಸ್ ಬರುವುದರೊಳಗೆ ನಿನ್ನ ಬದುಕಿನ ಕಥೆ ಬರೆದಿಡು. ಅದಕ್ಕೆ ಪ್ರತ್ಯೇಕ ಸಂಬಳ ಕೊಡುತ್ತೇನೆ’ ಎಂದರು. 

ನಿತ್ಯದ ಕೆಲಸ ಮುಗಿಸಿ ತನಗೆ ತೋಚಿದ ಮಾತುಗಳಲ್ಲಿ ತನ್ನದೇ ಬದುಕಿನ ಕಥೆಯನ್ನು ಆಕೆ ಬರೆದು ಮುಗಿಸಿದಳು. ಟೂರ್ ಮುಗಿಸಿಕೊಂಡು ಬಂದ ಪ್ರಭೋದ್ಕುಮಾರ್ ಅವಳ ಬರವಣಿಗೆ ಕಂಡು ಖುಷಿಯಾದರು. ನಂತರ ಹಾಲ್ದೇರ್ ಬಂಗಾಳಿಯಲ್ಲಿ ಬರೆದಿದ್ದ ಕತೆಯನ್ನು ಅವರು ಸರಿಪಡಿಸಿ ತಮ್ಮ ಸ್ನೇಹಿತರ ಮುಂದೆ ಓದಿದರು. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿತು.
 
ಇದನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲು ಆಲೋಚಿಸಿದ ಪ್ರಭೋದ್ರವರು ಪ್ರಕಾಶಕರಿಗಾಗಿ ಹುಡುಕಾಟ ನಡೆಸಿದರು. ಎರಡು ವರ್ಷ ಅಲೆದಾಡಿದರೂ ಪ್ರಕಾಶಕರೇ ಸಿಗಲಿಲ್ಲ. ಕೊನೆಗೆ ಪಶ್ಚಿಮ ಬಂಗಾಳದ ‘ರೋಷನಿ ಪ್ರಕಾಶನ’ದವರು ಈ ಪುಸ್ತಕ ಪ್ರಕಟನೆಗೆ ಒಪ್ಪಿಕೊಂಡರು. 

2004 ರಲ್ಲಿ ಮೊದಲ ಮುದ್ರಣ ಕಂಡ "Aalo Aandhari' [Light and Darkness]  "A Life Less Ordinary: A Memoir" ಹೆಸರಿನ ಆ ಪುಸ್ತಕ ಆ ವರ್ಷದ ‘ಬೆಸ್ಟ್ ಸೆಲ್ಲರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮುಂದಿನ ಕೆಲವೇ ವರ್ಷಗಳಲ್ಲಿ ಎಂಟು ವಿದೇಶಿ ಭಾಷೆಗಳೂ ಸೇರಿದಂತೆ ಒಟ್ಟು 24 ಭಾಷೆಗಳಿಗೆ ಆ ಪುಸ್ತಕ ಅನುವಾದಗೊಂಡಿತು. ತದನಂತರ ಹಾಲ್ದೇರ್ಳಿಗೆ ಜರ್ಮನಿ, ಫನ್ಸ್, ಸ್ಪೇನ್, ನ್ಯೂಯಾರ್ಕ್ಗೆ ಹೋಗುವ ಮತ್ತು ಅಲ್ಲಿನ ಸಾಹಿತ್ಯಗೋಷ್ಠಿಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುವ ಅದೃಷ್ಟ ದೊರಕಿತು.
  
‘ನನ್ನನ್ನು ತಂದೆಗಿಂತ ಹೆಚ್ಚಾಗಿ ನೋಡಿಕೊಂಡವರು ಪ್ರಭೋದ್ ಸಾಹೇಬರು ನನ್ನ ಪಾಲಿಗೆ ದೇವರು. ಅವರಿಗೀಗ 82 ವರ್ಷ ಅವರ ಸೇವೆಯೇ ನನ್ನ ಕರ್ತವ್ಯ’.  ಎನ್ನುತ್ತಾರೆ ಈಗಲೂ ಪ್ರಭೋದ್ರ ಮನೆಯಲ್ಲಿಯೇ ಕೆಲಸ
ಮಾಡುತ್ತಿರುವ ಬೇಬಿ ಹಾಲ್ದೇರ್. 

ಈಗಾಗಲೇ ಆಕೆ ಮೂರು ಪುಸ್ತಕಗಳನ್ನು ಬರೆದಿದ್ದಾಳೆ. ಅದೃಷ್ಟ ಎಂಬುದು ಯಾರನ್ನು, ಯಾವಾಗ ಹೇಗೆ ಬೇಕಾದರೂ ಆವರಿಸಿಕೊಳ್ಳುತ್ತದೆಂದು ಹೇಳಲು ಬೇಬಿ ಹಾಲ್ದೇರಳೇ ಉತ್ತಮ ಉದಾಹರಣೆ.
 
– ಜಗದೀಶ್ ಮಾನೆ

Post a Comment

0 Comments